ಶನಿವಾರ, ಅಕ್ಟೋಬರ್ 31, 2009

ನವಿಲುಗರಿ ಮರಿ ಹಾಕಲೇ ಇಲ್ಲ.....



                   ಇವರು ಒಟ್ಟು ಮೂರು ಜನ ಅಕ್ಕ-ತಂಗಿಯರು. ಮೊದಲನೆಯವಳ ಹೆಸರು ಜ್ಯೋತಿ, ತಂಗಿಯ ಹೆಸರು ಶ್ರುತಿ, ಕೊನೆಯವಳು  ಪ್ರೀತಿ. ಇವರು ನಂಗೆ ಪರಿಚಯವಾಗಿದ್ದು ನಾನು ಒಂದನೇ ಕ್ಲಾಸಿನಲ್ಲಿರಬೇಕಾದರೆ. ನಮ್ಮ ತಂದೆ ನನ್ನನ್ನು ಇವರಿಗೆ ಪರಿಚಯಿಸಿದ್ದು. ಯಾಕೆಂದರೆ ನಾನು ಹೊಸದಾಗಿ ಸೇರಿದ್ದ  ಸ್ಕೂಲಿಗೆ ಇವರು ಆಗಲೇ ಹಳಬರಾಗಿದ್ದರು. ಅದಕ್ಕಾಗಿ ನಾನು ದಿನ ಇವರ ಜೊತೆಯಲ್ಲಿಯೇ ಸ್ಕೂಲಿಗೆ ಹೋಗಿ ಬರಬೇಕಿತ್ತು. ಹೀಗಾಗಿ ಇವರು ಒಂದು ರೀತಿಯಲ್ಲಿ ನನ್ನ ಫಸ್ಟ್ ಗರ್ಲ್ ಫ್ರೆಂಡ್ಸ್!! ನಾನು ಆ ಶಾಲೆಯಲ್ಲಿ  ಕೇವಲ ಒಂದು ವರ್ಷ ಮಾತ್ರ ಓದಿ ನಂತರ ಕಾರಣಾಂತರದಿಂದ ಬೇರೊಂದು ಸ್ಕೂಲಿಗೆ ಸೇರಿಕೊಂಡೆ. ಹಾಗಾಗಿ ಕೆಲವು ತಿಂಗಳುಗಳ ಕಾಲ ನಾವು ಒಟ್ಟಿಗೆ ಹೋಗಿ ಬರುವುದು ನಿಂತುಹೋಯಿತು. ಆದರೆ, ನಾನು ಸೇರಿದ ಶಾಲೆಯನ್ನೇ ಅವರೂ ಸೇರುವುದರೊಂದಿಗೆ ಮತ್ತೆ ನಮ್ಮ ಒಡನಾಟ ಶುರುವಾಯಿತು. (ನೀವು ನಗುವುದಿಲ್ಲ ಅಂದ್ರೆ ನಿಮಗೊಂದು ಹೇಳ್ತೀನಿ ಕಣ್ರೀ ......ಅದೇನು ಅಂದ್ರೆ, ನಾನು ಅವರಲ್ಲಿ ಪ್ರೀತಿಯನ್ನು ಇಷ್ಟ ಪಡತೊಡಗಿದ್ದೆ(!!!!!), ಅವಳಿಗೂ ನಾನೆಂದರೆ ತುಂಬಾ ಇಷ್ಟವಿತ್ತು(!?)). ಆಗ ನಾವು ಓದುತ್ತಿದ್ದಿದ್ದು 3 ನೆ ಕ್ಲಾಸು!!!. ಹೀಗಾಗಿ ಅವಳು ನನ್ನ first crush.
                  'ನಾನು ಚೆಡ್ಡಿ-ಅವಳು ಫ್ರಾಕು'. ದಿನ ಸಂಜೆ ಅವರ ಮನೆಗೆ ಹೋಗಿ ಅವರೊಂದಿಗೆ ಆಟ ಆಡ್ತಿದ್ದೆ. ಶಾಲೆಯಿಂದ  ಬರಬೇಕಾದರೆ ದಾರಿಯಲ್ಲಿ ನೆಲ್ಲಿ ಕಾಯಿ ಮರ ಇತ್ತು. ನಾನು ಅವಳಿಗೆ ನೆಲ್ಲಿ ಕಾಯಿ ಆರಿಸಿಕೊಂಡು ಹೋಗಿ ಕೊಡುತ್ತಿದ್ದೆ. ಅವಳಿಗೆ ನೆಲ್ಲಿಕಾಯಿ ಅಂದ್ರೆ ತುಂಬಾ ಇಷ್ಟ. ಅದನ್ನು ತಿನ್ನುವಾಗ ಅವಳು ಮುಖ ಕಿವುಚುವುದನ್ನು ನೋಡುವುದು ನಂಗೆ ಇಷ್ಟ. ಅವಳು ತನ್ನ ಅಕ್ಕಂದಿರೆದುರಿಗೆ  ನಾನು ಡ್ರಾಯಿಂಗ್ ತುಂಬಾ ಚೆನ್ನಾಗಿ ಮಾಡ್ತೀನಿ ಅಂತ ನನ್ನನ್ನು ಹೊಗಳುತ್ತಿದ್ದಳು. ಹಿಂದಿ ಪರೀಕ್ಷೆ ಸಮಯದಲ್ಲಿ ನಾನು ಅವಳ ಪೇಪರನ್ನು ನೋಡಿ ಕಾಪಿಮಾಡುತ್ತಿದ್ದರೆ, ಡ್ರಾಯಿಂಗ್ exam ಇದ್ದಾಗ ಅವಳಿಗೆ ಚಿತ್ರ ಬರೆದು ಕೊಟ್ಟು ಕೃತಾರ್ತನಾಗುತ್ತಿದ್ದೆ.
                  ಮಾರ್ಕ್ಸ್ ಕಾರ್ಡ್ ಸೈನ್ ಮಾಡಿಸಲು ಮನೆಗೆ ತಗೊಂಡು ಹೋಗುವಾಗ ಅವರು ತಮಗೆ ಬಂದಿದ್ದ ಅಂಕಗಳನ್ನು ಹೆಮ್ಮೆ ಇಂದ ಎಲ್ಲಾರಿಗೂ ತೋರಿಸುತ್ತಿದ್ದರು. ಆದರೆ ನಾನು ನನಗೆ ಬಂದಿರುತ್ತಿದ್ದ  'ಅಮೋಘ' ಅಂಕಗಳ ಬಗ್ಗೆ ಹೇಳಿಕೊಳ್ಳಲಾಗದೆ ಸಂಕೋಚ ಪಡುತ್ತಿರಬೇಕಾದರೆ ಅವಳು ಬಂದು " ಪರವಾಗಿಲ್ಲ ಬಿಡು" ಎಂಬಂತ ಮಾತುಗಳ್ಳನ್ನು ಆಡಿ ಮನಸ್ಸಿಗೆ ಸಮಾಧಾನ ಕೊಡುತ್ತಿದ್ದಳು. " mathsನಲ್ಲಿ ಕಡಿಮೆ ಬಂದಿದ್ರೆ ಏನಂತೆ, ಡ್ರಾಯಿಂಗ್ ನಲ್ಲಿ  ನೋಡು ನಿಂಗೆ  ಇಡೀ ಕ್ಲಾಸಿಗೆ highest ಬಂದಿದೆ... A grade!" ಅಂತೆಲ್ಲ ಹೇಳಿ  "ಗ್ರೇಟ್ ಕಣೋ ನೀನು" ಎಂಬಂತೆ ನೋಡುತ್ತಿದ್ದಳು. ಅವಳು ಅಷ್ಟು ಹೇಳುವುದೇ ತಡ ನಾನು ಎಲ್ಲಿಲ್ಲದ ಖುಷಿಯಿಂದ ಉಬ್ಬಿ ಹೋಗಿರುತ್ತಿದ್ದೆ. ಇದೆಲ್ಲ ಹೀಗೆ ನಡೆಯುತ್ತಿರಬೇಕಾದರೆ......ಬಂತು ಐದನೇ ಕ್ಲಾಸು, ಬಂತು ನವೋದಯ ಪರೀಕ್ಷೆ, ಅಲ್ಲಿಗೆ ನಾನು ನವೋದಯ ಶಾಲೆ ಸೇರಿಕೊಂಡು ಎಲ್ಲರಿಂದ ದೂರ ಹೋಗಬೇಕಾಯಿತು.
                ನವೋದಯದಲ್ಲಿ ಹತ್ತನೇ ಕ್ಲಾಸು ಮುಗಿಸಿಕೊಂಡು  ಪಿ.ಯು.ಸಿ. ಮಾಡಲು ಮತ್ತೆ ನಮ್ಮೂರಿಗೆ ಮರಳಿದೆ. ಊರಿಗೆ ಮರಳಿದ ಕೆಲವು ದಿನಗಳ ನಂತರ ಅವರು ಮೊದಲು ಇರುತ್ತಿದ್ದ ಮನೆ ಮುಂದೆ ಒಂದೆರಡು ಬಾರಿ ಸುಳಿದಾಡಿ  ಅವರು ಇನ್ನು ಇದೆ ಊರಿನಲ್ಲಿ ಇದ್ದಾರೋ ಇಲ್ಲವೊ ಪರೀಕ್ಷಿಸಿದ್ದೆ. ಆದರೆ ಆ ಮನೆ ಖಾಲಿಯಾಗಿತ್ತು. ಅಲ್ಲಿ ಯಾರು ಇದ್ದಿರಲಿಲ್ಲ. ಕೊಂಚ ಬೇಸರದೊಂದಿಗೆ ಮನೆಗೆ ಮರಳಿದ್ದೆ. ಅಂದು ರಾತ್ರಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗಿದ್ದಾಗ ಮೆಲ್ಲಗೆ ಅವರ ಬಗ್ಗೆ ವಿಚಾರಿಸಿದೆ....ಆಗ ಅಮ್ಮನಿಂದ ತಿಳಿದಿದ್ದು ಇಷ್ಟು, 'ಈಗ ಅವರು ಬೇರೆ ಕಾಲೋನಿ ಯಲ್ಲಿ ಮನೆ ಮಾಡಿಕೊಂಡು ಇದ್ದಾರೆಂದು, ಅವರೀಗ ತುಂಬಾ ಶ್ರೀಮಂತರೆಂದು, ಕಾರಿನಲ್ಲಿ ತಿರುಗುತ್ತಾರೆಂದು' ತಿಳಿಯಿತು. ಅಲ್ಲಿಗೆ ನಾನು ಅವಳನ್ನು ಭೇಟಿಯಾಗುವ ಆಸೆಯನ್ನು ಕೈ ಬಿಟ್ಟಿದ್ದೆ. ಆದರೆ ಅಪ್ಪ ಮಾತ್ರ " ಲೇ, ಆ ಹುಡ್ಗೀರು ಅವಾಗವಾಗ ಮತಾಡಿಸ್ತಿರ್ತಾರೆ, ನಿನ್ ಬಗ್ಗೆ ಕೇಳ್ತಿರ್ತಾರೆ" ಅಂತ ಹೇಳಿ ಮುರುಟಿಕೊಂಡಿದ್ದ ಆಸೆ ಯನ್ನು ಮತ್ತೆ ಚಿಗುರುವಂತೆ ಮಾಡಿದ್ದರು. ನಮ್ಮೂರಿನಲ್ಲಿ ಆಗ ಇದ್ದಿದ್ದೇ ಒಂದು ಕಾಲೇಜ್. ಹಾಗಾಗಿ ಊರಿನ ಸಮಸ್ತ ಸುಂದರಿಯರು, ಪುಂಡರು, ನನ್ನಂತ ಕೆಲವು ಅಮಾಯಕರು ಆ ಕಾಲೇಜಿನ ಮೆಟ್ಟಿಲು ತುಳಿಯುವುದು ಅನಿವಾರ್ಯವಾಗಿತ್ತು. ನಾನು ಕಾಲೇಜ್ join ಆಗುವ ಹೊತ್ತಿಗೆ ಒಂದು ತಿಂಗಳು ತಡವಾಗಿ ಹೋಗಿತ್ತು. ಹಾಗಾಗಿ ನಮ್ಮದೇ ಕ್ಲಾಸಿನಲ್ಲಿ ನಾನು ಹೊಸಬನಾಗಿದ್ದೆ. ಕ್ಲಾಸಿನಲ್ಲಿ ಅಲ್ಲಲ್ಲಿ ಒಂದೆರಡು ಪರಿಚಯದ ಮುಖಗಳು ಕಂಡು ಮಾತನಾಡಿಸಿದವು. ಅಂತಹದೇ ಯಾವುದೋ ಒಂದು ಮುಖದ ಪಕ್ಕ ಕುಳಿತುಕೊಂಡೆ.ನವೋದಯದಲ್ಲಿ ಓದಿ ಬಂದಿರುವುದರಿಂದ ನಾನೆಲ್ಲೋ ಮಹಾನ್ ಮೇಧಾವಿ ಇರಬೇಕೆಂದು ಊಹಿಸಿ ಇನ್ನೂ ಕೆಲವು ಮುಖಗಳು ಮಾತನಾಡಿಸಲು ಹಿಂದೇಟು ಹಾಕುತ್ತಿದ್ದವು. ಇದೆಲ್ಲವುಗಳ ನಡುವೆ ನನ್ನ ಕಣ್ಣುಗಳು ಆ ಒಂದು ಮುಖಕ್ಕಾಗಿ ಹುಡುಕುತ್ತಿದ್ದವು. "ಇದೇ ಊರಲ್ಲಿದ್ದಮೇಲೆ ಇದೇ ಕಾಲೇಜಿಗೆ ಬರಲೇ ಬೇಕು...ಆದರು ಯಾಕೆ ಇಲ್ಲಿ ಕಾಣಿಸುತ್ತಿಲ್ಲ". ಪಕ್ಕದಲ್ಲಿದ್ದ ಮುಖಕ್ಕೆ ಕೇಳೋಣವೆಂದರೆ " ಎನಲೇ ಮಾಮ, ಬಂದಕೂಡಲೇ ಹುಡುಗಿ ಬಗ್ಗೆ ವಿಚಾರ್ಸಕ್ ಹತ್ತಿಯಲ, ಏನ್ ಸಮಾಚಾರ?"ಎಂದು ಎಲ್ಲಿ excite ಆಗ್ಬಿಡ್ತಾನೋ ಅಂತ ಭಯ. ಅವರು ಇಲ್ಲೇ ಇದ್ದಾರೆ, ನನಗೇ ಅವರನ್ನು ಗುರುತಿಸಲು ಆಗುತ್ತಿಲ್ಲವೇ?! ಅಥವಾ ಅವರು ಓದುವುದನ್ನು ನಿಲ್ಲಿಸಿಬಿಟ್ಟರೆ?!"  ಹೀಗೆ ಮನಸ್ಸು ಏನೇನೊ ಯೋಚನೆಗಳು ಮಾಡುತ್ತಿದ್ದಾಗ...ಇದ್ದಕ್ಕಿದ್ದಂತೆ ಕ್ಲಾಸ್ ರೂಮಿನಲ್ಲಿ  ಗಲಿ ಬಿಲಿ ಶುರುವಾಯಿತು ಮರುಕ್ಷಣದಲ್ಲೇ ಉಸಿರಾಟಗಳು, ನಿಟ್ಟುಸಿರುಗಳೂ ಕೆಳಿಸಬಲ್ಲಂತ ಮಹಾ ಮೌನವೊಂದು ಅಲ್ಲಿ ಬೆಳೆಯತೊಡಗಿತು. ಅಲ್ಲಿದ್ದ ಗಂಡು ಮುಖಗಳಲ್ಲಿದ್ದ ಕಣ್ಣು ಗುಡ್ಡೆ ಗಳೆಲ್ಲವೂ  ಬಾಗಿಲಿನ ಕಡೆಗೆ ನೆಟ್ಟಿದ್ದವು. ಈ ಬೆಳವಣಿಗೆಯಿಂದ ಮೊದಲಿಗೆ ಕೊಂಚ ಗಾಭರಿಯಾದ ನಾನೂ ಕುತೂಹಲದಿಂದ ನನ್ನ ಕಣ್ಣು ಗಳನ್ನು ಬಾಗಿಲಿನೆಡೆಗೆ ತಿರುಗಿಸಿದೆ. ಆಗ ಬಂದಳು ಅವಳು. " ಲೇ ಮಾಮ, ಇವಳೇ ನೋಡಲೇ ಈ ಕಾಲೇಜಿನ ಫಿಗರ್ " ಅಂತ ಪಕ್ಕದ ಮುಖದ ಬಾಯಿ ಬಡಬಡಿಸುತ್ತಿತ್ತು.ಅವರು ಕೇವಲ ಕಾಲೇಜಿಗೆ ಮಾತ್ರವಲ್ಲ  ಇಡೀ ಊರಿಗೆ ಸುಂದರಿಯರಾಗಿದ್ದರು (ದುರದೃಷ್ಟವೆಂದರೆ, ಈ ಸತ್ಯ ಅವರಿಗೂ ಗೊತ್ತಿತ್ತು). ನಾನೋ ಹಾಸ್ಟೆಲ್ ಜೀವನದಿಂದಾಗಿ ಬಡಕಲು ಸನ್ಯಾಸಿ ಥರ ಆಗಿದ್ದೆ. ಅವಳನ್ನು ಹಾಗೆ ಅಲ್ಲಿ ನೋಡಿದ ಮರುಕ್ಷಣವೇ ನಾನು ಅವಳನ್ನು ಮಾತನಾಡಿಸುವ ಆಸೆಯನ್ನು ಮತ್ತೊಮ್ಮೆ ಕೊಂದುಕೊಂಡೆ. ಅವಳಿಗೆ ನನ್ನ ನೆನಪು ಇರುವುದಕ್ಕೆ ಸಾಧ್ಯವೇ ಇಲ್ಲಾ ಎಂದು ಮನಸ್ಸು ನಿರ್ಧರಿಸಿತ್ತು. ಯಾಕೆ ನಾನಾಗೆ ಹೋಗಿ ಮಾತಾಡಿಸಿ ನಗೆಪಾಟಲಾಗಬೇಕು ಅಂತ ಸುಮ್ಮನಾಗಿ ಬಿಟ್ಟಿದ್ದೆ.
                  ಆವತ್ತು ಮಧ್ಯಾನ biology lab ಇತ್ತು. batches ಮಾಡುತ್ತಿದ್ದರು. ತುಕ್ಕು ಹಿಡಿದಿದ್ದ ನನ್ನ ಹಣೆ ಬರಹಕ್ಕೆ ಅದ್ಯಾರು ಸೀಮೆಎಣ್ಣೆ ತಗೊಂಡು ಉಜ್ಜಿದ್ದರೋ ಕಾಣೆ....ನನ್ನನ್ನು ಅವಳಿದ್ದ batch ಗೆ  ಹಾಕಬೇಕೆ. ಅದೂ ಸಾಲದೆಂಬಂತೆ ನನ್ನನ್ನು ಹುಡುಗಿಯರೊಂದಿಗೆ ಕೂದಿಸಬೇಕೆ. ಹೀಗೆ ನನಗೆ ಬಯಸದೆ ಬಂದ ಭಾಗ್ಯವನ್ನು ಕಂಡು ಉಳಿದ ಗಂಡು ಮುಖಗಳು ಕಪ್ಪಿಟ್ಟಿ ದ್ದವು. ಹುಡುಗಿಯರ ಗುಂಪಿನಲ್ಲಿ ನಾನು ಸಂಕೋಚದಿಂದ ಮುದುಡಿಕೊಂಡು ಕುಳಿತಿದ್ದೆ. ಅಲ್ಲೇ, ಸ್ವಲ್ಪ ಪಕ್ಕದಲ್ಲೇ ಅವಳು ಕುಳಿತಿದ್ದರು ಕೂಡ ಅವಳೆಡೆಗೆ ನೋಡಲು ಹಿಂದೇಟು ಹಾಕಿದ್ದೆ.   ಆ ದಿನ ಲ್ಯಾಬ್ ಮುಗಿಸಿಕೊಂಡು ಇನ್ನೇನು ಹೊರ ಬೀಳಬೇಕು  ಅನ್ನುವಷ್ಟರಲ್ಲಿ  ನನ್ನ ಹೆಸರು ಕೂಗಿದ್ದು ಕೇಳಿಸಿತು...ಅದು ಖಂಡಿತ ಅವಳದೇ ದ್ವನಿ...ತಿರುಗಿದೆ...ಹೌದು, ಅದು ಅವಳೇ!!! ಹಿತವಾದ ಮುಗುಳುನಗೆಯಂದಿಗೆ ನನ್ನ ಹತ್ತಿರ ಬರತೊಡಗಿದಳು......ನನ್ನ ಕಾಲ ಕೆಳಗೆ ಭೂಮಿ ಕಂಪಿಸುತ್ತಿದೆ ಏನೋ ಎಂಬಂತೆ ಕಾಲುಗಳು ನಡುಗಲು ಆರಂಬಿಸಿದವು. ನನ್ನ ಎದೆ ಸ್ಪಷ್ಟವಾಗಿ ಕೇಳುವಂತೆ ಭಾರಿಸಿಕೊಳ್ಳತೊಡಗಿತು. ಲ್ಯಾಬ್ ನಲ್ಲಿ ಇಟ್ಟಿದ್ದ ಅಸ್ತಿಪಂಜರ ನನ್ನೀ ಪರೀಸ್ಥಿತಿ ನೋಡಿ ಹಲ್ಲು ಕಿಸಿಯುತ್ತಿರುವಂತೆ ಭಾಸವಾಯಿತು....simple ಆಗಿ ಹೇಳಬೇಕೆಂದರೆ, ಅವಳು ಹತ್ತಿರ ಬರುವುದರೊಳಗಾಗಿ ನಾನು ಬೆವರಿಳಿಸಿಕೊಂಡು ನೀರು ನೀರಾಗಿದ್ದೆ. " ಏನು, ಚೆನ್ನಾಗಿದ್ದೀಯ?" ಅದೇ ಮುಗುಳ್ನಗೆ ಯೊಂದಿಗೆ ಕೇಳಿದ್ದಳುಅವಳು. " ಹುಂ, ನೀನು?!" ಎಂದು ಕೇಳುವಷ್ಟರಲ್ಲಿ  ಗಂಟಲಿನಲ್ಲಿ ನಾಲಿಗೆ ಅಡ್ಡಡ್ಡ ಸಿಕ್ಹಾಕಿಕೊಂಡಂತೆ ಆಗಿ.....ಮುಂದೇನು ಮಾತನಾಡಲಾಗದೆ, ಅವಳ ಮುಖವು ನೋಡಲಾಗದೆ ಅಲ್ಲಿಂದ ಕಾಲು ಕಿತ್ತಿದ್ದೆ.
                   'ಎಲ್ಲಿ ನಾನು ನೆಲ್ಲಿ ಕಾಯಿ ತರುವುದನ್ನು ಆಸೆ ಇಂದ ಕಾಯುತಿದ್ದ ಫ್ರಾಕು......ಎಲ್ಲಿ ಈ ಪ್ರಾಣವನ್ನೇ ಗಂಟಲಿಗೆ ತರಿಸಿ ಬಿಡುವ ಚೂಡಿದಾರ್ '. ' "ನೀನು ಗ್ರೇಟ್ ಕಣೋ" ಎಂಬಂತೆ ನೋಡಿ ಧೈರ್ಯ ತುಂಬುತ್ತಿದ್ದವಳು ಎಲ್ಲಿ........' ನನ್ನ ಇದ್ದ ಬದ್ದ ಧೈರ್ಯವನ್ನೆಲ್ಲ ಒಂದೇ  ಒಂದು ಮುಗುಳ್ನಗೆಯಿಂದ ನುಚ್ಚು ನೂರು ಮಾಡುವ ಇವಳೆಲ್ಲಿ'.  "ಅಲ್ಲ, ಇವಳು ಅವಳಲ್ಲ.......ಅವಳಾಗಿದ್ದರೂ ಇವಳು ನನಗಲ್ಲ....." ಅಂತ ಅವತ್ತೇ ನನಗೇ ಗೊತ್ತಾಗಿ ಹೋಯಿತು. ಅಷ್ಟೇ, ಅವಳ ಮೇಲಿನ ಆಸೆಯನ್ನು ಅದೇ ದಿನ ಶಾಶ್ವತವಾಗಿ ಕೊಂದುಕೊಂಡುಬಿಟ್ಟೆ.    

                          ಇಷ್ಟೇ, ಇದಾದ ಮೇಲೆ ಒಂದೆರಡು ಸಾರಿ ಅವಳಾಗೇ ಮತಾಡ್ಸಿದ್ರು. ನಾನು ಹಾಗೆ ತೊದಲುತ್ತಾ ಮಾತಾಡ್ತಿದ್ದೆ. ಕಾಲೇಜ್ ಮುಗೀತು.....ಮುಗೀತು. ಮುಂದೆ ನಾನು ಎಲ್ಲೆಲ್ಲಿಗೋ ಹೋದೆ. ಅವರೇನಾದರೂ ಅಂತನೂ ಗೊತ್ತಾಗ್ಲಿಲ್ಲ. ಕೊನೆಯದಾಗಿ ನಾನು ಅವಳನ್ನು ನೋಡಿದ್ದು ಮೂರು  ವರ್ಷದ ಕೆಳಗೆ ಇಲ್ಲೇ ಬೆಂಗಳೂರಿನಲ್ಲಿ.......ಜೊತೆಯಲ್ಲಿ ಯಾರೋ ಒಬ್ಬ handsome ನಿಂತಿದ್ದ.
ಈಗ ಅವಳು ಗರ್ಭಿಣಿ ಅಂತೆ.....!!!

ಭಾನುವಾರ, ಅಕ್ಟೋಬರ್ 25, 2009

ನರಕ ತುಂಬಲಿದೆ!

                   ....ಇನ್ನು ಮೂರೇ  ವರ್ಷ ಅಂತೆ, ಪ್ರಪಂಚ ನಾಶ ಆಗ್ತಾದಂತೆ. ಭೂಮಿಮೇಲೆ ಒಂದು ನರ ಪಿಳ್ಳೆನೂ  ಉಳಿಯೋಲ್ಲವಂತೆ. ಎಲ್ಲಾರು ಕುಂತ್ ಕುಂತಲ್ಲೇ, ನಿಂತ್ ನಿಂತಲ್ಲೇ ನೆಗ್ದು ಬೀಳ್ತಾರಂತೆ. ಕೊಳವೆ ಬಾವಿಯಲ್ಲಿ ಚಿಕ್ಕ ಮಕ್ಕಳು ಬಿದ್ದು ಸಾಯುವಂತೆ ದೊಡ್ಡವರು ಬಾಯಿ ಬಿಟ್ಟ ಭೂಮಿಯೊಳಗೆ ಗುಂಪು ಗುಂಪಾಗಿ ಬಿದ್ದು ಸಾಯುತ್ತಾರಂತೆ. ಅದೆಲ್ಲಿಂದಲೋ ನೀರು ಊರೊಳಗೆಲ್ಲ ನುಗ್ಗಿ ಕೈಗೆ ಸಿಕ್ಕವರನೆಲ್ಲ ತನ್ನೊಂದಿಗೆ  ಎಳೆದುಕೊಂಡು ಮತ್ತದೆಲ್ಲಿಗೋ ಹೊರಟು ಹೋಗುತ್ತದಂತೆ. ಸಾಯುವುದಕ್ಕೆ ಎಷ್ಟು ವಿಧಗಳಿವೆಯೋ ಅಷ್ಟೆಲ್ಲಾ ವಿಧಗಳಿಂದ ಜನರು ಸಾಯುತ್ತಾರಂತೆ. ಸಾಯಲಿ ಬಿಡ್ರಿ.....ನಾನೊಬ್ನೇನ ಸಾಯೋದು? ಪ್ರಪಂಚದಲ್ಲಿ ಯಾರು ಉಳಿಯೋಲ್ಲ ಅಂತಿದಾರೆ....ಒಳ್ಳೇದೇ ಆಯ್ತು. ಎಲ್ರೂ ಒಟ್ಟಿಗೆ ಹೊರಟುಬಿಡೋಣ. ಸಾಯಬೇಕಾದರೆ ನಮಗೆ ಬೇಕಾದವರೊಂದಿಗೆ ಕೈ ಕೈ ಹಿಡ್ಕೊಂಡು ನಿಂತಿದ್ರೆ ಇನ್ನೂ ಒಳ್ಳೇದು, ಹೋಗ್ತಾ ಜೊತೆಗೆ ಹೋಗಬಹುದು...ಜನ ಜಂಗುಳಿಯಲ್ಲಿ ನಮ್ಮವರಿಂದ ಕಳೆದು ಹೋಗುವ ಭಯವಿರುವುದಿಲ್ಲ, ಗಂಡ-ಹೆಂಡತಿ-ಮಕ್ಕಳು, ತಾಯಿ-ಮಗ, ಗೆಳೆಯ-ಗೆಳತಿ, ಎಡ್ಡಿ-ಶೋಭಾ, ದೇವೇಗೌಡರು-ಮಕ್ಕಳು-ರಾಧಿಕ, ಸಾಲ ಕೊಟ್ಟವನು-ಸಾಲ ಇಸ್ಕೊಂಡವನು, ಹೀಗೆ ಅವರವರಿಗೆ ಬೇಕಾದವರ ಕೈ ಹಿಡ್ಕೊಂಡು ಹೋಗ್ತಾ ಇರ್ಬೇಕು ಅಷ್ಟೇ.
                           "ಸರಿ, ಹೋಗೋಣ, ಆದರೆ ಎಲ್ಲಿಗೆ?!" ಎಂಬ  ಅಮಾಯಕ ಪ್ರಶ್ನೆ ಮಾತ್ರ ಕೇಳಬೇಡಿ. ಭೂಮಿಮೇಲೆ ಮನುಷ್ಯ ಎಂಬ ಪ್ರಾಣಿಯಾಗಿ ಹುಟ್ತೀವಿ, ಹುಟ್ಟಿದ ಒಂದೇ ಕಾರಣಕ್ಕಾಗಿ ಸಾಯ್ತೀವಿ...ಈ ಹುಟ್ಟಿ ಸಾಯುವ ಎರಡು ಕ್ರೀಯೆಗಳ ನಡುವೆ  ಅದೇನೋ ಪಾಪ-ಪುಣ್ಯ ಅಂತ ಮಾಡಿಬಿಡ್ತೀವಂತೆ( ನಮಗೆ ಗೊತ್ತಿಲ್ದೆ!). ಮೇಲೆ (!?) ಒಬ್ಬ ಕೂತ್ಕೊಂಡು ನಮ್ಮ ಈ ಪಾಪ-ಪುಣ್ಯದ ಲೆಕ್ಕಾಚಾರ ಬರೀತಿರ್ತಾನಂತೆ ( ಅವನದು ಅದೇನು ಹಣೆ ಬರಹನೋ, ಪಾಪ.). ಒಬ್ಬ ವ್ಯಕ್ತಿ ಸತ್ತ ಮೇಲೆ ಅವನ ಈ ಪಾಪ-ಪುಣ್ಯದ account book ತೆಗೆದು ಗುಣಾಕಾರ, ಬಾಗಾಕಾರ, ಕೂಡಿಸಿ, ಕಳೆದು ಎಲ್ಲ ಮಾಡಿ.(ಅಸಲಿಗೆ ಇಷ್ಟೆಲ್ಲಾ ಮಾಡೋದು ಬೇಕಿತ್ತಾ?!) ಅವನನ್ನು next ಎಲ್ಲಿಗೆ ಕಳಿಸಬೇಕೆಂದು ನಿರ್ಧರಿಸುತ್ತಾರೆ. ಮಾನವ ಸಹಜ ವರ್ತನೆಗಳೊಂದಿಗೆ ಬದುಕಿದಿದ್ದರೆ ಅವನನ್ನು ನರಕಕ್ಕೆ ತಳ್ಳುತ್ತಾರೆ. ಬದುಕಿಯೂ ಸತ್ತಂತಿದ್ದವರನ್ನು ಸ್ವರ್ಗಕ್ಕೆ ಕಳಿಸುತ್ತಾರಂತೆ.(ಇಲ್ಲಿಗೆ ಹೋದವರು ತುಂಬ ವಿರಳ. ಅದು ಕ್ಲಾಸ್ ರೂಂ ಗಳ ಹಾಗೆ ಖಾಲಿ ಹೊಡೆಯುತ್ತಿರುತ್ತದಂತೆ!!). ಹೀಗಿರುವ  ಸ್ವರ್ಗವೆಂಬ ಮಹಾ boring ಸ್ಥಳಕ್ಕೆ ನಾವಾದರು ಯಾಕೆ ಹೋಗ್ಬೇಕು, ಅಲ್ವ? (ನಾವು ಹೋಗ್ತೀವಂದ್ರು ನಮ್ನ ಅಲ್ಲಿಗೆ ಕಳಿಸೋದಿಲ್ಲ, ಅದ್ ಬೇರೆ ಮಾತು).
                  ಸರಿ, ಇದೆಲ್ಲ ಹೋಗ್ಲಿ ಅತ್ಲಾಗೆ. ಒಂದಂತು ಗ್ಯಾರಂಟಿ. ಪ್ರಪಂಚದಲ್ಲಿ ಪ್ರಳಯ ಆಗಿ  ಮಾನವ ಸಂಕುಲ ಸರ್ವ ನಾಶ ಆದಮೇಲೆ whole sale ಆಗಿ ನಾವೆಲ್ಲರೂ ಹೋಗೋದು ನರಕಕ್ಕೆ. ನಿಜವಾದ ಸಮಸ್ಯೆ ಶುರುವಾಗೋದೇ ಇಲ್ಲಿ.

                                                         ( ಮುಂದುವರೆಯುವುದು)