ಶುಕ್ರವಾರ, ಜನವರಿ 27, 2012

ಬೆಂಗಳೂರು ಸಾಕಾಗ್ಯದ!

ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು.......


ಹೇಳಿದ್ರೆ ಜೊತೆಗೆ ನಾನು ಬರ್ತಿದ್ನಲ್ಲೋ..... ಬೆಂಗಳೂರು ಸಾಕಾಗ್ಯದ

ಭಾನುವಾರ, ಮೇ 2, 2010

















೧.
ಕತ್ತಲು......
ಫ್ಯಾನು ತಿರುಗುತ್ತಿರುವುದೊಂದೇ ಜೀವಂತಿಕೆ ಸಂಕೇತ.
ಅಷ್ಟರಲ್ಲಿಯೇ ಹೊತ್ತಿತೊಂದು ಬೆಂಕಿ......ಮೂಡಿತೊಂದು ಕೆಂಪು.
ಅದರ ಹಿಂದೆಯೇ ಸುರುಳಿ ಸುರುಳಿಯಾಗಿ ಹೋಗೆ,
ಕವಿತೆ  ಹುಟ್ಟುವುದರೊಳಗೆ..........
ಉಳಿದಿದ್ದು ಬರೀ ಭೂದಿ, ಮತ್ತದೇ
ಕತ್ತಲು..................

೨.
ಎರಡು ಸಿಗರೇಟುಗಳ ಮದ್ಯೆ ಕಂಡಿದ್ದು.....
ಕಪ್ಪು ಮತ್ತು ಕೆಂಪು,
ಅಷ್ಟೇ.

೩.
ಮನದಲ್ಲಿದ್ದ ಭಾವನೆಗಳನ್ನು ಕವಿತೆಯಾಗಿಸಬೇಕೆಂದಿದ್ದೆ.
ಸಿಗರೇಟು ಹಚ್ಹ್ಚಿದೊಡನೆ.....
ಹೊಗೆಯಾಗಿ ಹಾರಿಹೋದವು.
ಬೂದಿಯಷ್ಟೇ ಉಳಿದಿದೆ.

೪.
ಮನದಲ್ಲಿ ಅವಳ ನೆನಪು, ಬಾಯಲ್ಲಿ ಸಿಗರೇಟು.
ಯಾವುದನ್ನು ಹೊತ್ತಿಸಲಿ....?
ಎರಡೂ ಸುಡುವುದು ನನ್ನನ್ನೇ.

ಭಾನುವಾರ, ನವೆಂಬರ್ 22, 2009

ದೀಪವಿರದ ದಾರಿಯಲ್ಲಿ - ೨.





                                          ಹೌದು, ಆ ರಾತ್ರಿ ನಾನು ಸತ್ತು ಹೋದೆ.

     **********
ಹಾಸಿಗೆಯಲ್ಲಿ ಉರುಳಿದವನಿಗೆ ಅದ್ಯಾವ ಹೊತ್ತಿನಲ್ಲಿ ನಿದ್ದೆ ಹತ್ತಿತೆಂದು ನನಗೆ ಗೊತ್ತಿಲ್ಲ. ನನ್ನ ಜೀವನ ಕೊನೆಯ ನಿದ್ದೆಯಾಗಿತ್ತು ಅದು. ಅಷ್ಟೊಂದು ಘಾಡವಾಗಿ ನಾನೆಂದೂ ಮಲಗಿದ್ದಿಲ್ಲ ಅನ್ಸಿಸುತ್ತದೆ. ಮಧ್ಯದಲ್ಲಿ ಅದೊಮ್ಮೆ ಎಚ್ಚರವಾಯಿತು. ಏನೋ ಒಂದು ರೀತಿಯ ಸಂಕಟ. ಉಸಿರಾಡಲು ಆಗುತ್ತಿಲ್ಲ. ಬಾಯಿಂದಲೂ ಗಾಳಿಯನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದೆ....ಊಹುಂ, ಆಗಲಿಲ್ಲ. ನನ್ನ ಎಡಗೈ ಮುಷ್ಠಿ ಹಾಸಿಗೆಯನ್ನು ಬಲವಾಗಿ ಹಿಡಿದುಕೊಂಡಿತ್ತು. ಬಲಗೈ ಎದೆಯ ಮೇಲೆ ಹರಿದಾಡತೊಡಗಿತ್ತು. ದೇಹ ಮೇಲೇರಿ ಮೇಲೇರಿ ಕೆಳಗಿಳಿಯುತ್ತಿತ್ತು. ಕೆಲ ಕ್ಷಗಳ ನಂತರ ಕಣ್ಣು ಮಂಜಾಗತೊಡಗಿದವು. ಅಷ್ಟೇ, ನಂತರ ಘಾಡವಾದ ಕತ್ತಲೊಂದು ಆವರಿಸಿಕೊಳ್ಳತೊಡಗಿತ್ತು....ಯಾರೋ ಕಡುಗಪ್ಪು ಕಂಬಳಿಯನ್ನು ಮುಖದ ಮೇಲೆ ಹೊದೆಸಿದಂತೆ. ನಾನು ಕಣ್ಣು ಮುಚ್ಚತೊಡಗಿದೆ. ಮುಚ್ಚಿದೆ. ಫಳ್...... ಆಗಲೇ ಕಂಡಿದ್ದು ಆ ಬೆಳಕು. ಬೆಳಕೆಂದರೆ ಅಂತಿಂಥ ಬೆಳಕಲ್ಲ.....ಅಲ್ಲಿ ಆ ಬೆಳಕನ್ನು ಬಿಟ್ಟು ಬೇರೇನೂ ಕಾಣದಂಥ ಬೆಳಕು. ನಾನು ನಡೆಯುತ್ತಿದ್ದೇನೆ....ಬೆಳಕಿನೊಳಗೆ. ರಸ್ತೆಯಿಲ್ಲ, ಫೂಟ್ ಪಾಥ್ ಇಲ್ಲ, ಗಿಡ-ಮರಗಳಿಲ್ಲ, ಕಟ್ಟಡಗಳಿಲ್ಲ..... ಅಲ್ಲಿದ್ದಿದ್ದು ಕೇವಲ ಬೆಳಕು.

                 ನಾನು ಹಾಗೆ ಅದೆಷ್ಟು ಹೊತ್ತು, ಅದೆಷ್ಟು ದೂರ, ಅದ್ಯಾವ ದಿಕ್ಕಿಗೆ ನಡೆದೇನೋ ಗೊತ್ತಿಲ್ಲ.ಆದರೆ ಅದೊಂದು ಕಡೆ ನನ್ನನ್ಯಾರೋ ಜಗ್ಗಿ ನಿಲ್ಲಿಸದಂತಾಯಿತು. ಮುಂದೆ ಹೆಜ್ಜೆ ಇಡಲಾಗಲಿಲ್ಲ. ಕಣ್ಣ ಮುಂದೆ ಸಮುದ್ರದಂತೆ ಹರಡಿರುವ ಅದೇ ದಿವ್ಯವಾದ ಬೆಳಕು. ಏನು ಮಾಡಲು ತೋಚದೆ ನಿಂತವನಿಗೆ ಇದ್ದಕಿದ್ದಂತೆ ಕಿವಿಯ ಪಕ್ಕ ಯಾರದೋ ಉಸಿರು ತಾಕಿದಂತಾಗಿ ಬೆಚ್ಚಿ ಬಿದ್ದೆ. ನಂತರ ಸ್ಪಷ್ಟವಾದ ದ್ವನಿಯೊಂದು ಪಿಸುಮಾತಿನಲ್ಲಿ ಹೇಳತೊಡಗಿತು.
" ನಿನಗೆ ಮುಂದೆ ಹೋಗಲು ಅನುಮತಿ ಇಲ್ಲ "
" ಯಾಕೆ? ನಾನೆಲ್ಲಿದ್ದೇನೆ? ನೀನು ಯಾರು? " ಕೇಳಿದೆ.
" ಪರವಾಗಿಲ್ಲ ಕಣಯ್ಯಾ, ನೀನೂ ಪ್ರಶ್ನೆಗಳನ್ನು ಕೇಳ್ತಿದ್ದಿಯಲ್ಲ !!! ಇದೆ ರೀತಿ ನೀನು 'ಅಲ್ಲಿಯೇ' ಕೇಳಿದ್ದಿದ್ದರೆ ನಿನಗೆ ಈ ಗತಿ ಬಂದಿರೋದಲ್ಲ"
" ಅಲ್ಲಿಯೇ ಅಂದರೆ?! "
" ನೀನು ದೇಹದೊಂದಿಗಿದ್ದಾಗ.... ಅಂದರೆ ಭೂಮಿಯಲ್ಲಿದ್ದಾಗ."
ಹಾಗಾದರೆ ಇದು ಭೂಮಿಯಲ್ಲವೇ?! ನಾನು ದೇಹದೊಂದಿಗಿಲ್ಲವೇ?! ನನ್ನ ಕೈಗಳನ್ನು ನೋಡಿಕೊಂಡೆ.... ಎಲ್ಲಿದೆ ಕೈ. ಕೆಳಗೆ ಕಂಡಿದ್ದೆಲ್ಲ ಅದೇ ಬೆಳಕು. ಕಾಲು, ಎದೆ, ಹೊಟ್ಟೆ.... ಊಹುಂ, ಏನೂ ಕಾಣುತ್ತಿಲ್ಲ. ಕಡೆಯಪಕ್ಷ ನನ್ನ ಮುಖವಾದರೂ ಇದೆಯೇ... ಮುಟ್ಟಿ ನೋಡಿಕೊಳ್ಳುವ ಧೈರ್ಯವಾಗಲಿಲ್ಲ. ಈಗ ನಾನು ಏನೂ ಅಲ್ಲ... ನನ್ನದು ಅಂತ ಏನೂ ಇಲ್ಲ, ನನ್ನ ದೇಹ ಕೂಡ ನನ್ನೊಂದಿಗಿಲ್ಲ. ನಾನು ಆ ಬೆಳಕಿನಲ್ಲಿ ಬೆಳಕಾಗಿ ಹೋಗಿದ್ದೆನೆಯೇ?!! ದೇವರೇ, ನನಗೆ ಹುಚ್ಚು ಹಿಡಿಯುತ್ತಿದೆಯೇನೋ ಅನ್ನಿಸತೊಡಗಿತ್ತು.
" ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳಬೇಡ. ಅದೇನು ಕೇಳು" ಮತ್ತೆ ಕೇಳಿಸಿತು ದ್ವನಿ.
" ನಾನು ಏನೂ?! " ಅಳುತ್ತಿದ್ದೆನೇನೋ, ಗೊತ್ತಾಗುತ್ತಿಲ್ಲ.
" ನೀನೊಂದು ಆತ್ಮ. ದೇಹ ಬಿಟ್ಟು ಬಂದ ಆತ್ಮ."
ಅಂದರೆ ನಾನು ಸತ್ತು ಹೋದೆನೆ?!! ಕೋಣೆಯಲ್ಲಿ ಒಬ್ಬನೇ ಮಲಗಿಕೊಂಡಲ್ಲೇ ಸತ್ತು ಹೋಗಿದ್ದೆನೆಯೇ?! ನಾನು ಸತ್ತಿದ್ದು ಯಾರಿಗಾದರು ಗೊತ್ತಾಗಿದೆಯೋ ಇಲ್ಲವೋ. ಗೊತ್ತಾಗಲಿಲ್ಲವೆಂದರೆ ನನ್ನ ದೇಹ ಅಲ್ಲಿಯೇ ಕೊಳೆತು ಹೋಗಿಬಿಟ್ಟರೆ!!
" ಸತ್ತ ಮೇಲೆಯೂ ದೇಹದ ಬಗ್ಗೆ ಚಿಂತೆ ಮಾಡುತ್ತಿರುವೆಯೆಲ್ಲ.... ನೀವೆಲ್ಲ ಇಷ್ಟೇ ಕಣ್ರಯ್ಯ."
ಹೌದಲ್ಲ?! ಅಷ್ಟಕ್ಕೂ ನಾನು ಸತ್ತಿದಕ್ಕೆ ನಾನೊಬ್ಬನೇ ದುಖ್ಖಃ ಪಡಬೇಕು. ನನಗಾಗಿ ಅಳುವವರು ಅಲ್ಲ್ಯಾರು ಇಲ್ಲ. ಅವರಿಗೆ ಗೊತ್ತಾದರೆಷ್ಟು ಬಿಟ್ಟರೆಷ್ಟು.
" ಸರಿ, ಮುಂದೇನು. ನಾನು ಈಗ ಏನೂ ಮಾಡಬೇಕು? ನನ್ನನೆಲ್ಲಿ ಕರೆದು ಕೊಂಡು ಹೋಗುತ್ತೀರಿ? ಸ್ವರ್ಗ ಅಥವಾ ನರಕ? ಇಲ್ಲಿ ನನಗೇನು ಕಾಣುತ್ತಿಲ್ಲ.... ಎಲ್ಲ ಬೆಳಕು ಬೆಳಕು. ನೀವು ಕಾಣುತ್ತಿಲ್ಲ. ನನಗೆ ದೇವರ ಹತ್ತಿರ ಕರೆದುಕೊಂಡು ಹೋಗುತ್ತೀರಾ?" ಅದ್ಯಾಕೋ ಗೊತ್ತಿಲ್ಲ.... ನನಗೆ ಖುಷಿಯಾಗ ತೊಡಗಿತ್ತು.
" ಮಗು, ನೀನೆಲ್ಲೂ ಹೋಗುವ ಹಾಗಿಲ್ಲ"
" ಅಂದರೆ?!!"
" ಹೌದು ಮಗು, ನಿನಗೆ ಮುಂದೆ ಹೋಗಲು ಅನುಮತಿಯನ್ನು ನಿರಾಕರಿಸಲಾಗಿದೆ"
ನಿರಾಕರಿಸಲಾಗಿದೆ ಅಂದರೆ ಏನರ್ಥ? ಹಾಗಾದರೆ ನಾನೆಲ್ಲಿ ಹೋಗಬೇಕು? ಈ ಬೆಳಕಿನಲ್ಲಿ ಮಾತ್ರ ಇರಲಾರೆ....ಇದು ನನಗೆ ಹುಚ್ಚು ಹಿಡಿಸುತ್ತಿದೆ. ನಂಗ್ಯಾವತ್ತು ಇಷ್ಟೊಂದು ಪ್ರಶ್ನೆಗಳು ಬಂದಿದ್ದಿಲ್ಲ.
" ಅದೇನು ಅಂತ ಸರಿಯಾಗಿ ಹೇಳಿ ಸ್ವಾಮಿ"
" ಮಗು, ನೀನೊಂದು ಅತೃಪ್ತ ಆತ್ಮ. ನೀನು ಕೇವಲ ದೇಹವನ್ನು ಮಾತ್ರ ಬಿಟ್ಟು ಬಂದಿದ್ದೀಯ. ಮನಸ್ಸು ಇನ್ನೂ ಖಾಲಿಯಾಗಿಲ್ಲ. ಅಲ್ಲಿ ಸಾವಿರಾರು ಪ್ರಶ್ನೆಗಳು ಉತ್ತರ ಸಿಗದೇ ಹಾಗೆ ಕುಳಿತುಕೊಂಡಿವೆ. ಹೇಳಲಿಕ್ಕಿರುವ ವಿಷಯಗಳು ಹೇಳಬೇಕಾದವರಿಗೆ ಹೇಳಲಾಗದೆ ಅಲ್ಲಿಯೇ ಉಳಿದು ಹೋಗಿವೆ. ನೋವು, ದುಖ್ಖಃ, ಆಸೆ ಎಲ್ಲವೂ ಮನಸ್ಸಿನಲ್ಲಿ ಉಳಿದುಕೊಂಡಿವೆ. ಅದಕ್ಕಾಗಿಯೇ ನಿನಗಿನ್ನೂ ಈ ಬೆಳಕನ್ನು ಭರಿಸಲಾಗುತ್ತಿಲ್ಲ. ಅವೆಲ್ಲವನ್ನು ಕಳೆದುಕೊಂಡು ಬಾ. ನಿರ್ಮಲ ಮನಸ್ಸಿನೊಂದಿಗೆ ಬಾ. ಆಗ ನೀನು ಈ ಬೆಳಕಿನಲ್ಲಿ ಬೆಳಕಾಗಿ ಹೋಗುತ್ತೀಯ. ಅದೇ ಪ್ರತಿಯೊಂದು ಆತ್ಮದ ಅಂತ್ಯ."
" ಹೋಗು, ನೀನು 'ಅಲ್ಲಿಗೆ' ವಾಪಸ್ ಹೋಗು. ನಿನ್ನ ಮನಸನ್ನು ಹಗುರಾಗಿಸಿಕೊಂಡು ಬಾ. ಆದರೆ ಈಗ ನಿನಗಲ್ಲಿ ಯಾವುದೇ ದೇಹದ ಆಸರೆ ಮಾತ್ರ ಸಿಗುವುದಿಲ್ಲ ಅಷ್ಟೇ."
ಮತ್ತೆ ನನಗೆ ಆ ದ್ವನಿ ಕೇಳಿಸಲಿಲ್ಲ. ಎಷ್ಟೋ ಹೊತ್ತು ಅಲ್ಲಿಯೇ ನಿಂತಿದ್ದೆ. ಬೇರೆ ದಾರಿ ಇಲ್ಲ. ಈಗ ನಾನು ವಾಪಸ್ ಹೋಗಲೇ ಬೇಕಿತ್ತು. ಹಿಂತಿರುಗಿ ನಡೆಯ ತೊಡಗಿದೆ...........................................

                   ನನ್ನ ಕೋಣೆಯೆಲ್ಲ ಧೂಳು ತುಂಬಿ ಕೊಂಡಿತ್ತು. ಅಲ್ಲಿ ನನ್ನ ಯಾವುದೇ ಸಮಾನುಗಳಿರಲಿಲ್ಲ. ಅಲ್ಲಿ ಮನುಷ್ಯ ವಾಸದ ಯಾವುದೇ ಕುರುಹು ಗಳಿರಲಿಲ್ಲ. ನಾನು ಸುಮ್ಮನೆ ಅಲ್ಲಿಯೇ ನಿಂತಿದ್ದೆ. 'ಹೋಗುವುದಾದರೂ ಯಾರ ಹತ್ತಿರ? ಕೆಳುವುದಾದರು ಎನನ್ನು? ಹೇಳಬೇಕಾದಾಗಲೇ ಹೇಳಲಿಲ್ಲ. ಕೇಳಬೇಕಾದಾಗಲೇ ಕೇಳಲಿಲ್ಲ. ಈಗ ಅವರನ್ನು ಹೋಗಿ ಏನೂ ಕೇಳುವುದು. ಅಷ್ಟಕ್ಕೂ ನಾನು ಅವರ ಹತ್ತಿರವೇ ಯಾಕೆ ಹೇಳಿಕೊಳ್ಳಬೇಕು. ಒಟ್ಟಿನಲ್ಲಿ ಮನಸ್ಸಿನ ಮಾತುಗಳನ್ನು ಹೇಳಿಕೊಂಡು ಹಾಗುರಾಗಲು ಯಾರಾದರೇನು.' ಈ ಯೋಚನೆ ಬಂದಿದ್ದೆ ಕೊನೆಯಿಂದ ಹೊರಗೆ ಬಂದೆ. ಕೆಳಗಡೆ ಅಂಗಡಿಯ ಶೆಟ್ಟರು ನೆನಪಾದರು. ಅವಾಗಾವಾಗ ನನ್ನ ಕೆಲಸದ ಬಗ್ಗೆ ಕೇಳಿ ವಿಚಾರಿಸಿ ಕೊಳ್ಳುತ್ತಿದ್ದರು. ಅವರ ಅಂಗಡಿಯ ಮುಂದೆ ಹೋಗಿ ನಿಂತೆ. ಗಿರಾಕಿಗಳಿಲ್ಲದೆ ಶೆಟ್ರು ನಿದ್ದೆ ಹೊಡೆಯುತ್ತಿದ್ದರು. ಅವರ ಹೆಸರನ್ನು ಕೂಗಿದೆ. ನಿದ್ದೆ ಜೋರಿತ್ತೆಂದು ಕಾಣುತ್ತದೆ, ಅವರು ಏಳಲಿಲ್ಲ. ಮತ್ತೆರಡು ಬಾರಿ ಕೂಗಿದೆ, ಪ್ರಯೋಜನವಾಗಲಿಲ್ಲ. ಧೈರ್ಯ ಮಾಡಿ ಅಂಗಡಿಯ ಒಳಗೆ ಹೋಗಿ ಅವರನ್ನು ತಟ್ಟಿ ಎಬ್ಬಿಸಲು ಪ್ರಯತಿನಿಸಿದೆ.....ಅವರು ಮಿಸುಕಲಿಲ್ಲ. ಅವರು ಉಸಿರಾಡುತ್ತಿದಾರೋ ಇಲ್ಲೋ ಪರೀಕ್ಷಿಸ ಬೇಕೆನಿಸಿತು-ಪಾಪ, ಇವರು ನನ್ನಂತೆ ನಿದ್ದೆಯಲ್ಲೇ ಸತ್ತು ಹೋಗಿದ್ದರೆ?- ಅಷ್ಟರಲ್ಲೇ ಯಾರೋ ಗಿರಾಕಿ ಬರುವ ಹೆಜ್ಜೆ ಸಪ್ಪಳದಿಂದಾಗಿ ಶೆಟ್ರು ಎದ್ದು ಕುಳಿತರು. 'ಅಲಾ ಶೆಟ್ಟಿ, ನಾನು ಅಷ್ಟು ಹೊತ್ತಿನಿಂದ ಕೂಗಿದರು ಏನೂ ಕೇಳದಂತೆ ನಿದ್ದೆ ಮಾಡುತ್ತಿದ್ದವ ಈ ಗಿರಾಕಿ ಬರುವ ಹೆಜ್ಜೆ ಸಪ್ಪಳಕ್ಕೆ ಎದ್ದು ಕುಳಿತಿದ್ದಿಯಲ್ಲ.' ಅಂದುಕೊಂಡು. ಅವರನ್ನು ಮತ್ತೆರಡು ಬಾರಿ ಕರೆದೆ. ಅವರು ತಮ್ಮ ವ್ಯಾಪಾರದಲ್ಲಿ ಮುಳುಗಿದ್ದರು. ಸಿಟ್ಟು ಬಂದು ಸುಮ್ಮನೆ ಇಲ್ಲಿ ಕಾಲ ಹರಣ ಮಾಡಿ ಉಪಯೋಗವಿಲ್ಲವೆಂದು ಕೊಂಡು ಹೊರಗೆ ಬಂದೆ. ಪಕ್ಕದ ಮನೆಯ ಪುಟ್ಟಿ ಅಲ್ಲೇ ಆಡಿಕೊಳ್ಳುತ್ತಿದ್ದಳು. ಯಾವಾಗಲೂ 'ಅಂಕಲ್...ಅಂಕಲ್' ಎಂದು ಓಡಿ ಬರುತ್ತಿದ್ದವಳು ಇಂದು ನನ್ನ ಇರುವಿಕೆಯ ಅರಿವೇ ಇಲ್ಲದಂತೆ ತನ್ನ ಪಾಡಿಗೆ ತಾನು ಇದ್ದಳು. ನನಗೇಕೋ ಸಂಶಯ ಬರತೊಡಗಿತು. ರಸ್ತೆಯಲ್ಲಿ ಓಡಾಡುತ್ತಿದ್ದ ಒಂದಿಬ್ಬರನ್ನು ತಡೆದು ನಿಲ್ಲಿಸಲು ನೋಡಿದೆ. ಎಲ್ಲ ವ್ಯರ್ಥ. ಅವರ್ಯಾರಿಗೂ ನಾನು ಅಲ್ಲಿರುವುದು ಗೊತ್ತೇ ಇಲ್ಲವೆಂಬಂತೆ ಹೊರಟು ಹೋದರು. ಅಂದರೆ, ನನ್ನನು ಇವರ್ಯಾರು ನೋಡಲಾರರು. ನನ್ನ ಮಾತು ಇವರ್ಯಾರಿಗೂ ಕೇಳಲಾರದು. ನನ್ನ ಇರುವಿಕೆ ಇವರಿಗೆಲ್ಲ ಶೂನ್ಯ. ಅಯ್ಯೋ!! ಹಾಗಾದರೆ ನಾನು ನನ್ನ ಮನಸ್ಸಿನ ಮಾತುಗಳನ್ನು ಹೇಗೆ ಹೇಳಿಕೊಳ್ಳಬೇಕು. ದಿಕ್ಕುತೊಚದವಂತಾಗಿ ನಡು ರಸ್ತೆಯಲ್ಲಿ ನಿಂತುಕೊಂಡು ಗಟ್ಟಿಯಾಗಿ ಎದೆ ಹೊಡೆದು ಹೋಗುವಂತೆ ಕಿರುಚಿದೆ... ನನ್ನೋಳಗಿನಿಂದ ಬಸ್ಸೊಂದು ಹಾರ್ನ್ ಮಾಡುತ್ತಾ ಹಾದುಹೋಯಿತು.

                  ನನ್ನನ್ಯಾರು ನೋಡಲಾರರು, ಕೇಳಲಾರರು. ನನಗುಳಿದಿದ್ದ ದಾರಿಯೊಂದೇ. ಅದು ಬರೆಯುವುದು. ಹೌದು, ನಾನು ನನ್ನ ಮನಸ್ಸಿನಲ್ಲಿರುವುದೆಲ್ಲ ಬರೆದುಬಿಟ್ಟು ಹಗುರಾಗಿಬಿಡಬೇಕು. ಅದಕ್ಕಾಗಿ ನನ್ನ ಬ್ಲಾಗ್ ಇದೆ. ನನ್ನ 'ಕನ್ನಡಿ'. ಒಂದಲ್ಲ ಒಂದು ದಿನ ಅಪ್ಪಿ ತಪ್ಪಿ ಅದನ್ನು ಯಾರಾದರು ಓದೇ ಓದುತ್ತಾರೆ. ಓದದಿದ್ದರೂ ಸಹ ನನ್ನ ಮನಸ್ಸಿನ ಭಾವನೆಗಳನ್ನು ಆಗಲೇ ಹೇಳಿಕೊಂಡಂತೆ ಆಗಿರುತ್ತದೆ. ಇದು ನನಗಿರುವ ಕಡೇ ಆಯ್ಕೆ. ಸರಿ, ನನ್ನ ಆಫೀಸ್ ನ ಕಡೆಗೆ ಹೊರಟೆ. ಸೆಕ್ಯೂರಿಟಿಯವನು ಎದ್ದು ಸಲಾಂ ಹೊಡೆಯಲಿಲ್ಲ. ಅದೆಲ್ಲದರ ಬಗ್ಗೆ ಗಮನ ಕೊಡಲು ನನಗೆ ವ್ಯವಧಾನವಿಲ್ಲ. ನಾನು  ಬಾಗಿಲುಗಳನ್ನು ತೆರೆದುಕೊಂಡು ಹೋಗುತ್ತಿಲ್ಲ...ಸುಮ್ಮನೆ ನುಗ್ಗುತ್ತಿದ್ದೇನೆ. ನನ್ನ ಕಿಷ್ಕಿಂದೆಯನ್ನು ಹೊಕ್ಕೆ. ಟೇಬಲ್ ಮೇಲಿನ ನೇಮ್ ಪ್ಲೇಟ್ ನನ್ನ ಹೆಸರಿನ ಬದಲು ಬೇರೆ ಹೆಸರನ್ನು ಬರೆದುಕೊಂಡಿತ್ತು. ಹೋಗಿ ಕಂಪ್ಯೂಟರ್ ನ ಮುಂದೆ ಕುಳಿತೆ. ಕಂಪ್ಯೂಟರನ್ನು ಆನ್ ಮಾಡಲು ಬಟನ್ ಒತ್ತಿದೆ. ಊಹುಂ, ಬಟನ್ ಕೆಲಸ ಮಾಡುತ್ತಿಲ್ಲ....ಅಥವಾ ನನ್ನ ಬೆರಳಿನ ಒತ್ತಡ ಸಾಕಾಗುತ್ತಿಲ್ಲ. 'ಅಂದರೆ, ನಾನು ಏನನ್ನು ಹಿಡಿದುಕೊಳ್ಳಲು ಆಗುವುದಿಲ್ಲವೇ?..............ಅಂದರೆ, ನಾನಿನ್ನು ಹೀಗೆಯೇ ಇದ್ದು ಬಿಡಬೇಕೇ?...............ಅತೃಪ್ತ ಆತ್ಮವಾಗಿಯೇ ಉಳಿದು ಬಿಡಬೇಕೇ?.............. ಇಲ್ಲ ಇಲ್ಲ. ಹಾಗಾಗಬಾರದು. ನಾನು ಹೇಳಬೇಕು. ನನ್ನ ಮನಸ್ಸಿನ ಮಾತುಗಳನ್ನು, ಭಾವನೆಗಳನ್ನು ಒಂದೇ ಒಂದು ಸಾರಿ ಹೇಳಿಕೊಂಡು ಬಿಡಬೇಕು. ಪ್ಲೀಸ್ ದೇವರೇ, ನನ್ನನ್ನು ಹೀಗೆ ಕೈಬಿಡಬೇಡ'. ಮತ್ತೊಮ್ಮೆ ಪ್ರಯತ್ನಿಸಿದೆ....ಮತ್ತೊಮ್ಮೆ ಮತ್ತೊಮ್ಮೆ.....
...........................................................................................
                ಕಂಪ್ಯೂಟರ್ ಪರದೆಯನ್ನೇ ದಿಟ್ಟಿಸುತ್ತಿದ್ದೇನೆ. ಕೆಲವು ಗಂಟೆಗಳೇ ಕಳೆದು ಹೋಗಿವೆ. ಹೀಗೆ ಇನ್ನೆಷ್ಟು ಹೊತ್ತು ಕುಳಿತಿರುತ್ತೇನೋ ಗೊತ್ತಿಲ್ಲ. ನನ್ನ ಬೆರಳುಗಳು ಕೀಲಿಮಣೆಯ ಮೇಲೆ ಸುಮ್ಮನೆ ಹರಿದಾಡುತ್ತಿವೆ. ಆದರೆ ಪರದೆಯ ಮೇಲೆ ಮಾತ್ರ ಅಕ್ಷರಗಳು ಮೂಡಲು ಹಿಂದೇಟು ಹಾಕುತ್ತಿವೆ. ನನ್ನ ಬೆರಳುಗಳು ಹಾಕುತ್ತಿರುವ ಒತ್ತಡಕ್ಕೆ ಕೀಲಿಮಣೆ ಸ್ಪಂದಿಸುತ್ತಿಲ್ಲ. ನನ್ನಲ್ಲಿ ಉಳಿದಿದ್ದ ಇದೊಂದು ಆಸೆಯು ಮೆಲ್ಲಗೆ ಕರಗಲಾರಂಭಿಸಿದೆ. ಸುತ್ತಲೂ ಕತ್ತಲು ಬೆಳೆಯಲಾರಂಭಿಸಿದೆ.

                                                      ( ಮುಗಿಯಿತು )  
          

ಸೋಮವಾರ, ನವೆಂಬರ್ 16, 2009

ಹೀಗೊಂದು ಕೊಲೆ.

ಸರಿ, ನಾನೂ ಬರೆಯುತ್ತಿದ್ದೇನೆ ಕವಿತೆ.
ಪದಗಳ ಹಂಗಿಲ್ಲ, ಪ್ರಾಸ ಗೊತ್ತಿಲ್ಲ....
ಸ್ವಲ್ಪ ತ್ರಾಸಾದರು ಓದಿಕೊಳ್ಳಿ,
ಇದು ಮೊದಲ ಪ್ರಯತ್ನ.

ಆಯ್ತು, ವಿಷಯವಾದರೂ ಬೇಕಲ್ಲ ?
ತೆರೆದಿಟ್ಟುಕೊಂಡು ಕುಳಿತಿದ್ದೇನೆ ನೆನೆಪಿನ ಕಪಾಟು.
ಹುಡುಕುತ್ತಿದ್ದೇನೆ ಭಾವನೆಗಳನ್ನು..... ಕತ್ತಲಲ್ಲಿ.
ಛೆ! ಬರೆಯಲು ಯೋಗ್ಯವಾದದ್ದು ಯಾವುದು ಸಿಗುತ್ತಿಲ್ಲ.
ಸಹನೆ ತೀರಿ ಹೋಗುತ್ತಿದೆ.

ಕೈಗೆ ಸಿಗುವ ಭಾವವನ್ನು ಹಿಡಿದು, ಕೊಂದು
ಹಾಳೆಯ ಮೇಲೆ ಸಮಾಧಿ ಮಾಡಿ ಕವಿತೆಯನ್ನಾಗಿಸುವ
ಕ್ರೂರ ಹುನ್ನಾರ......... ಹೆಚ್ಚಾಗುತ್ತಿದೆ.
ಮನಸ್ಸು ಹುಚ್ಚಾಗುತ್ತಿದೆ.

ಅಯ್ಯೋ! ಬೇಡವೇ ಬೇಡ.
ಈ ಕವಿತೆಗಳ ಸಹವಾಸವೇ ಬೇಡ.
ಬರೆಯಲು ಕುಳಿತ ಮನಸ್ಸು ಕೊಲೆಗಾರನಾಗುತ್ತಿದೆ.
ಅಷ್ಟಕ್ಕೂ, ಭಾವನೆಗಳನ್ನು ಪದಗಳಿಗಿಳಿಸಹೋದರೆ-
- ಅದು ಕೊಲೆಯೇ..........

( P.S- ಕವಿತೆಗಳನ್ನು ಹೀಗೂ ಕೊಲೆಮಾಡಬಹುದು....ಹ್ಹೆ..ಹೇ...)